Saturday, January 22, 2011

ಆಮಂತ್ರಣ

ಪ್ರಿಯರೆ,
ನಿಮ್ಮ ಕಣಾದನ ಮೊದಲ ಕಥಾಸಂಕಲನ "ಮೊದಲ ಮಳೆಯ ಮಣ್ಣು" ಇದೇ ಬುಧವಾರ ಜನವರಿ ೨೬ರಂದು ಬಿಡುಗಡೆಯಾಗಲಿದೆ. ೨೦೧೧ರ ಛಂದ ಪುರಸ್ಕಾರವನ್ನು ಪಡೆದ ಕಥಾಸಂಕಲನದ ಬಿಡುಗಡೆಯ ಸಮಾರಂಭವು ಬೆಳಿಗ್ಗೆ ೧೦:೩೦ರಿಂದ ಚಾಮರಾಜಪೇಟೆಯ ಕ.ಸಾ.ಪ ಸಭಾಂಗಣದಲ್ಲಿ ಜರುಗಲಿದೆ.

ನಿಮ್ಮ ಉಪಸ್ಥಿತಿಯನ್ನು ಅಪೇಕ್ಷಿಸುವ,
ಡಾ. ಕಣಾದರಾಘವ

Sunday, April 18, 2010

ಮತ್ತೆ, ಆರು ರುಬಾಯತ್ತುಗಳು.

ಕಳೆದ ಭೂತದ ಕೋಪ ವರ್ತಮಾನದ ಶಾಪ
ಆ ಭವಿಷ್ಯದ ತಾಪ ,ಬೆಂಕಿ ಸಾಕಿ.
ಚಿಂತನೆಯ ಫಲ ಪಾಪ ಚಿತೆಯೇರಿದರು ಬಿಡದು,
ತತ್ತ್ವಗೋಷ್ಠಿಗೆ ಕಾಲವಡ್ಡಬರದು.


ಸುಖದ ಮೂಲಕೆ ಶ್ರೇಷ್ಠ ಸನ್ಯಾಸವೆನ್ನುವರು
ಸರ್ವಸಂಗಪರಿತ್ಯಾಗವೆನ್ನುವರು.
ಸಾಕಿ ತಿಳಿಯದು ನನಗೆ ಈ ಶಬ್ದಗಳ ಮರ್ಮ
ಪರ್ವತವು ದುಃಸಾಧ್ಯ, ಪರಮಾಣು ಕೂಡ.


ದಟ್ಟ ಕಪ್ಪಿನ ನಿಶೆಯ ತಿಳಿಸೆರಗಿನಂಚಿನಲಿ
ಹೊನ್ನ ಬಣ್ಣದ ಚಿತ್ರ ರವಿವರ್ಣಕುಂಚದಲಿ
ಅರಳುತಿರೆ ಇತ್ತ ನಿಶೆಯಾ ಪ್ರಭೆಗೆ ಕಂಗಾಲು
ಹಿಡಿಯೋಣ ಬಾ ಬೆಳಗ ಕಿಟಕಿ ತೆರೆದು!


ಸೂರ್ಯ ಬಳಲಿದ ಘಳಿಗೆ ಮರಳಿ ಬಂದಳು ರಾತ್ರಿ
ಪಡುವಣದಿ ಬೀಳ್ಗೊಂಡು ರತಿರೂಪ ಧರಿಸಿ.
ನಳಿರುಬೆರಳುಗಳಿಂದ ಕತ್ತಲನು ಹೊದ್ದಿಸುವ
ಧಾತ್ರಿ - ವತ್ಸಲೆ -ಪ್ರಕೃತಿ- ಮಾಯೆ! ಸಾಕಿ.


ಆಗಸದ ತೊಟ್ಟಿಲಿಗೆ ರಾತ್ರಿ ಚಂದಿರ ಬಿದ್ದ
ಹೊಡೆತಕ್ಕೆ ಬೆಳ್ಳಿನೆರೆಯುಕ್ಕುವುದ ಕಂಡು,
ಕಡಲಿನಡೆಯುಬ್ಬುತಿದೆ, ಚಕ್ರಕ್ಕಿ ತೃಷೆ ನೀಗಿ
ನಲಿಯುತಿದೆ, ಸಂತೃಪ್ತಿ-ಪ್ರಕೃತಿಯೇ ಸಾಕಿ!


ಬಿರುಬಿಸಿಲ ಹಗಲೊಂದು ರಾತ್ರಿಯನು ಕೇಳಿತ್ತು
"ಅದಲುಬದಲಾಗೋಣವೇನು ಒಮ್ಮೆ?"
ರಾತ್ರಿ ಹೇಳಿತು ನಕ್ಕು "ನನ್ನ ಮಗ್ಗುಲು ನೀನು,
ಮತ್ತೇಕೆ ಬದಲಾಟ ಸಂಜೆ ಕೂಡೋಣ!"

Sunday, April 11, 2010

ಇತ್ತೀಚಿನ ರುಬಾಯತ್ತುಗಳು

ನಟ್ಟಿರುಳು ಬೆಳಗಾಗಿ ಮತ್ತಿರುಳು ಹಗಲಾಗಿ
ಬಟ್ಟಲಾಗಸದಲ್ಲಿ ಶಶಿಯು ರವಿಯೂ..
ಸಾಕಿ ಸಾಕೇ ಸುರೆಯು ಇನ್ನೊಂದು ಬಟ್ಟಲಿಗೆ
ಚುಕ್ಕೆಗಳು ಬಂದಾವು ಮಲಗು ಬಾರಾ....


ಕೇಳ್ ಸಿತಾರಿನ ತಂತಿ ತನುಸ್ವನದಿ ನುಡಿಯುತಿದೆ
" ಸುಖ ದುಃಖವನು ನಾನು ಹಾಡಬಲ್ಲೆ!
ಮಧುಲಿಪ್ತಶಾರೀರ ರತಿಲಿಪ್ತ ಆತ್ಮವಿದು
ನೀ ತತ್ತ್ವವನುಭವಿಸು ನಾನೆ ನುಡಿವೆ!"


ಹಾಯ್! ನೋಡು, ಹಾಯ್ದೋಣಿ ಕಡಲಗಲವಳೆಯುತಿದೆ
ತುದಿಗೆ ಕಡಲಕ್ಕಿ ಅಣಕಿಸುತ ದೋಣಿಯನು
ಗೊತ್ತುಗುರಿ ಬೇಕಿಲ್ಲ ಹಾರುವಾಸೆಗೆ ಸಾಕಿ
ಚೇತನಕೆ ಮಿತಿಯಿಲ್ಲ ಹಾರೋಣ ಬಾರೆ!


ಜಾಹಿರಳು ನೀ ಸಾಕಿ ಶಾಯರರ ನುಡಿಗಳಲಿ
ಬಡವನಾಡುವುದ ಕೇಳುವೆಯ ನೀನು?
ತಂತ್ರಮಂತ್ರಗಳೊಳಗೆ ಹೊಸತನವ ಹುಡುಕುತ್ತ
ಹಳತನ್ನೆ ನುಡಿಸುವೆನು ನುಡಿವೆಯೇನು?


ಕಾವಳದ ಚಾದರದಿ ಅಡಗಿ ಮೆಲ್ಲನೆ ಅಡಿಯ-
-ನಡಗಿಸುತಲೇ ಬರುವ ಮಾಗಿಯಂತೆ,
ಮಿದುಸಿತಾರಿನ ತಂತಿಗಳ ಮೀಂಟು ಕಣ್ಮುಚ್ಚಿ
ಮಧು-ಮಂಜು-ರತಿ-ಗೀತ, ನಿರ್ವಾಣ ಸಾಕಿ!


ಕುರುಡು ರಾತ್ರಿಯ ದಟ್ಟ ಕಪ್ಪು ಸುತ್ತಲು ಸಾಕಿ
ಚುಕ್ಕಿಯಣಕಿನ ಎದುರು ಭುವಿ ಬಾಗಿತಲ್ಲ!
ನಿಶೆ ಕಪ್ಪು ಭವ ಕಪ್ಪು ಕ್ಷಿತಿಜ ಕಪ್ಪಿರಲಿ ಬಿಡು
ತೆರೆದ ಬಾಗಿಲ ಬುಡದಿ ಹಣತೆ ಹಚ್ಚು.


ಸಾಕಿ ಕಿಸೆಯಲಿ ಚಂದ್ರತಾರೆಗಳ ತಂದಿರುವೆ,
ಎಂದಿನಂತೆಯೆ ಇಂದು ಬರಬಹುದೆ ಒಳಗೆ?
ಹಣವಂತರಿಗೆ ನೀಡು ಮಧುಪಾತ್ರೆಗಳ, ನಿನ್ನ
ಕಣ್ಣಬಟ್ಟಲ ಮದಿರೆಯೆನಗೆ ಸಾಕು!

Thursday, October 22, 2009

ಜನಿವಾರದ ಮರ

ಆ ಕುಂಡದಲ್ಲಿ ಬಂದು
ಬಿದ್ದದ್ದು ಅದೊಂದೇ ಬೀಜ.

ಆಕಾಶ ನೀರೆರೆಯಿತು,
ಗಾಳಿ ಗೊಬ್ಬರ.
ಕ್ಷೇತ್ರ ಹದಗೊಂಡು ನೀರಲ್ಲಿ ಮಿದುಗೊಂದು
ಬೀಜ ಕುಂಡದ ಮಣ್ಣಿನೊಳಗೆ
ಬೆದೆಗೊಳ್ಳತೊಡಗಿತು...
ಎಲ್ಲಿಂದಲೋ ಎರೆಯುತ್ತ ಬಂದು
ಮಣ್ಣ ಹದವನ್ನು ಮಿದುಮಾಡುತ್ತ
ಆ ಎರೆಹುಳ, ಬೀಜದ ಸುತ್ತ
ಸುತ್ತತೊಡಗಿತು....

ಒಂದು ದಿನ,
ತನ್ನನ್ನು ಪೋಷಿಸಿದ
ಕುಂದದೊಳಗಿನ ಮಣ್ಣ
ಮೇಲ್ಪದರವನ್ನು ಭೇದಿಸಿ
ಸಿಳಾರನೆ
ಹೊರಬಿತ್ತು ಹಸಿರು_ಕಂದು
ಅಂಕುರ.

ಸುದ್ದಿಯಾಯಿತು ಊರೆಲ್ಲ.
ಕುಂಡದೊಳಗೆ ಹುಟ್ಟಿದ ಅಶ್ವತ್ಥದ
ಅಂಕುರದ ಸುತ್ತ
ಸತ್ತ ಎರೆಹುಳ.
"ನಾಲವೇಷ್ಟ ಜನನ"!

ಜಮಾಯಿಸಿತು ಪುರೋಹಿತವರ್ಗ,
ಪುರೋಗಾಮಿಗಳು ನಕ್ಕರು,
ಹೆಂಗಳೆಯರು ಅತ್ತರು,
ಊರ ಮಕ್ಕಳನ್ನೆಲ್ಲ ಆವರಿಸತೊಡಗಿತು
ಬಾಲಗ್ರಹ,
ಕಂದ-ಪೈಶಾಚ-ಸರ್ಪ-ವೈಕರ್ತನ.

ಶಾಂತಿಯಾಗಬೇಕು........

ತೆಂಗಿನಕಾಯಿಯಿಂದ ಹೊಡೆದರು
ಕುಂಡದ ಗೋಡೆಗಳಿಗೆ,
ಅವು ಒಡೆದು ಹೋದವು.
ತೆಂಗಿನ ಕಾಯಿ ನಕ್ಕಿತು.

ಅಶ್ವತ್ಥದ ಪುಟ್ಟ ಅಂಕುರವನ್ನು
ಕುಂಡದ ಮಣ್ಣ ಸಮೇತ
ಊರ ನಡುವಿನಲ್ಲಿ ನೆಟ್ಟರು,

ಹಾಲೆರೆದರು,
ನೀರೆದರು,

ಹವನಗಳು ಆಗಿಹೋದವು
ಲೆಕ್ಕವಿಲ್ಲದಷ್ಟು,
ಸುತ್ತ ಕಾಡು ಬರಿದಾಯಿತು.

ವರ್ಷಗಳೇ ಕಳೆದುಹೋದವು...


...................................


ಊರ ನಡುವಿನ ಅಶ್ವತ್ಥದ
ಸುತ್ತ ಕಟ್ಟಿದ ಕಟ್ಟೆಯ ಮೇಲೆ,

ಹಳೆ ಮುಖಗಳ
ಭೂತ ಕನ್ನಡಕದ
ಭೂತ ದೃಷ್ಟಿಯ ಕಣ್ಣುಗಳು,

ಹೊಸಮುಖಗಳ
ಹೊಸತನ್ನು ಹುಡುಕುವ-ಹೊಸೆಯುವ
ಕಣ್ಣುಗಳು,

ಅಶ್ವತ್ಥ ಸುತ್ತುವ
ಬಂಜೆ ಹೆಂಗಸರ
ಆರ್ತ ಕಣ್ಣುಗಳು,

ಸುತ್ತ ಬಿಳಲುಗಳಲ್ಲಿ
ಜೋಕಾಲಿ ಜೀಕುವ
ಚಿಣ್ಣರ ಹೊಳೆವ ಕಣ್ಣುಗಳು...

ಅಶ್ವತ್ಥ ಸೊಂಪಾಗಿ ಬೆಳೆದು
ಹರಡಿ ನಿಂತಿದೆ.
ಅದರ ಬೃಹತ್ ಕಾಂಡದ ಸುತ್ತ ಕಟ್ಟಿದ ಉದ್ದ
ಜನಿವಾರ,
ಭೂತವನ್ನು ನೆನಪಿಸುತ್ತದೆ.
ಅಶ್ವತ್ಥ ನೆನಪಿಸಿಕೊಳ್ಳುವುದಿಲ್ಲ.

Tuesday, September 29, 2009

ಅಗ್ನಿವರ್ಣ

ಉರಿಯುತ್ತದೆ, ಕರಗುತ್ತದೆ,
ಕರಗಿಸುತ್ತದೆ ಹರಡುತ್ತ..

ಸುತ್ತಲ ಅವಕಾಶವನ್ನು ಬಂಗಾರದ ಬಣ್ಣದಲ್ಲಿ ಮೀಯಿಸುತ್ತ
ಜಾದೂಗಾರನ ಕೈಯಲ್ಲಿ ಬಣ್ಣ ಬದಲಿಸುವ ಬೆಂಕಿಯ ಮೂಲದಗ್ನಿಗೆ ಒಂದೇ ಮುಖ.

ಸಮಿತ್ತುಗಳ ಆಹುತಿಯಲ್ಲಿ ಹುಟ್ಟುವ
ಯಜ್ನಕುಂಡದ ಅಗ್ನಿಗೆ ದೇವತಾಭಾವ.
ಸುತ್ತ ಶತರುದ್ರ - ಚಂಡೀ - ಮಂಗಳ- ಸ್ವಸ್ತಿ
ಮಂತ್ರಪುಷ್ಪ.
ಘನ ಪಾಠಿಗಳ ಗಂಟಲಿನಿಂದ ಚಿಮ್ಮುವ ನಾದಾಗ್ನಿಯ ಸಮೀಕರಣ,
ಯಜ್ಞಕುಂಡದಿಂದ ಚಿಮ್ಮುವ ಕಲ್ಯಾಣಾಗ್ನಿಯ ಜ್ವಾಲೆಗಳೊಂದಿಗೆ.
ರುದ್ರ ಜಾಗ್ರತ ದೃಷ್ಟಿ , ಶ್ರವಣ.


ಮಹಾಭೂತದಿಂದ ಹೊರಬಂದು ಅಗ್ನಿ ಬೆಂಕಿಯಾದಾಗ
ಮುಖಗಳೂ ಹಲವಾರು, ಪ್ರಭಾವವೂ.

ಮಿಥುನಕ್ಕೆ ಮೀಸಲಿಟ್ಟ ಥಂಡಿಕೋಣೆಯ ಅಗ್ಗಿಷ್ಟಿಕೆಯಲ್ಲಿ
ವಾಜೀಕರ ಬೆಂಕಿಯಿಂದ ನಿರಂತರ ಕಾಮೋನ್ಮಾದ.
ಮನ್ದಾಗ್ನಿಯಿಂದ ಹತ್ತು ಇಂದ್ರಿಯಗಳೂ ಜಾಗ್ರತ.
ಬೆಳಗೆದ್ದು ಮುಲುಕುವ ಮಿಥುನದ ಮುಖದಲ್ಲಿ ಉಳಿವ ಬೂದಿ,
ಚಳಿಯಲ್ಲಿ ಅರಳಿದ ಮೈ ಮನದ ಪ್ರಭಾವ.

ಹಗಲೆಲ್ಲ ಬಿಸಿಯ ವಿಪರೀತದ ಭಾವಕ್ಕೆ ಚಡಪಡಿಕೆ ಮತ್ತೆ.
ಮತ್ತೆ ಚಡಪಡಿಕೆ ರಾತ್ರಿಯೆಲ್ಲ ಚಳಿಯ ವಿಪರೀತದ ಭಾವಕ್ಕೆ.

ಬಿಸಿ ಚಳಿಯ ಸಂಘರ್ಷ,
ಅಗ್ಗಿಷ್ಟಿಕೆಯ ಬೆಂಕಿ.

ಅಷ್ಟಗಲ ಚಿತೆಯ ಚಟಪಟ ಜ್ವಾಲೆಗಳಲ್ಲಿ,
ಆತ್ಮನ ಮಹಾಸ್ಫೋಟ.
ಸುತ್ತ ಮೌನ ಸ್ಮಶಾನ.
ಸತ್ತ ಹೆಣದ ಮೇಲೆ ಮತ್ತೆ
ದೇವತಾಭಾವ.

ಜೀವಾಗ್ನಿಗೆ ಅಗ್ನಿಯಿಂದಲೇ ಮುಕ್ತಿ.
ಬೆಂಕಿ ಕರಗುತ್ತದೆ, ಬೆಂಕಿಯಿಂದಲೇ.

ಯಜ್ಞಕುಂಡದ ಬೆಂಕಿ
ರಾತ್ರಿ ಮಿಥುನದಲ್ಲಿ ಕರಗಿ
ಮಾರನೆಯ ದಿನ ಚಿತೆಯೇರಿ
ಮಹಾಭೂತವಾಗುತ್ತದೆ.

Saturday, September 26, 2009

ಮತ್ತೆರಡು ರುಬಾಯತ್ತುಗಳು


ಧರೆಗಿಳಿದು ಬಂದಳೋ ಕಪ್ಪುಸುಂದರ ರಾತ್ರಿ
ನಿಬ್ಬೆರಗು ಭುವಿಯವಳ ಛಾಯೆಯಲಿ ಕಪ್ಪು,
ಹಣತೆ ಬೆಳಗಿಸಿ ಕದವ ತೆರೆದಿತ್ತು ಬಾ ಸಖಿಯೆ
ಮನೆ ಮನವು ತೆರೆದಿರಲಿ ಮಧುಪಾತ್ರೆಯಂತೆ.


ನೋಡಲ್ಲಿ ನಲ್ಬೆಳಗು ಬಾನ ತುದಿಯಲಿ ಮೂಡಿ
ರವಿಚಂದ್ರ ನಕ್ಷತ್ರರಾಟ ಜೂಟಾಟ!
ಮಧುರತಿಯ ತೋಷದಲಿ ದೇಹವರಳಿದೆ ರಾತ್ರಿ
ಮುದ್ದು, ಬೆಳಗಲಿ ಮಿಂದು ಆತ್ಮವರಳಲಿ ಬಾರೆ..

Sunday, August 2, 2009

ಅವಳ ವಸಂತ...

ಅದು ವಸಂತ.

ಅವಳು ಮತ್ತು ನಾನು,

ಎಂದಿನಂತೆ ನಮ್ಮ ಅಮರ ಪ್ರೇಮಕ್ಕೆ

ಸಾಕ್ಷಿಯಾಗಿದ್ದ

ದೊಡ್ಡ ಮಾವಿನಮರ.

ಪ್ರಕೃತಿ ಚೆಂದವಿತ್ತು.

ಅವಳು ಕವಿಯಾಗು ಎಂದಳು.

ಮುಖವಾಡವನ್ನು ಚಾಚಿ ಧರಿಸಿದೆ..

"ಕೋಗಿಲೆಯು ಕೂಗುವುದು ಪ್ರಕೃತಿ ಗೀತ.

ಭೂಕಂಪ ಸಂತ್ರಾಸ ಭೂಮಿಗೇ ತಾನೆ!

ನಿನ್ನ ಅಂಗಿಗೆ ಎಷ್ಟು ಗುಂಡಿಗಳು ಉಂಟೋ

ಹೊಸ ಹಾಳೆ ಮೂಸಲದೆಂಥ ರಮ್ಯ!"

ಅವಳ ಮುಂಗುರುಳು ಹಣೆಯ ತುಂಬ

ಹರಡಿ ಮತ್ತೆ ಯಥಾಸ್ಥಿತಿಯಲ್ಲಿ ನಿಂತಿತು.

ಅರ್ಥವಾಗಲಿಲ್ಲವೆಮ್ಬುದು ನನಗೂ ಅರ್ಥವಾಯಿತು..

ಮನಸ್ಸರಳಿತು..

ಮುಖವಾಡ ಕಳಚಿಟ್ಟೆ

"ನಿನ್ನ ನಾಚಿಕೆ ಛಂದ - ಚಂದ ಪರದೆಯ ಹಿಂದೆ

ಚಂದ - ಛಂದದಿ ಪದ್ಯ ಬರೆದಿಟ್ಟ ಹಾಗೆ..

ಮಧ್ಯರಾತ್ರಿಯ ಚಂದ್ರ ಘುಲಾಮಲಿ ಗಜಲುಗಳು

ಹಳೆ ಮದ್ಯದಾ ಶೀಶೆ ಜತೆಗಿದ್ದ ಹಾಗೆ.."

ಅವಳು ನಕ್ಕಳು,

ಮಳೆಗಾಲದ ಪ್ರಕೃತಿಯಂತೆ..

"ಕೋಗಿಲೆಯ ಕುಲದಲ್ಲಿ ಕೊಲಾಹಲವೆದ್ದಿತ್ತು

ನಿದ್ದೆಯಿಂದಾಗಷ್ಟೆ ಎದ್ದವೋ ಎಂಬಂತೆ

ಕೂಕುಹೂಗಳ ರಿಂಗನದಿ ಮರಗಳೆಲೆ

ಗಳೆಲ್ಲವೂ ಕೋಗಿಲೆಯ ಹಸಿರು ರೂಪ."

ವಸಂತ ಕಳೆದ.