Saturday, May 30, 2009

ರುಬಾಯತ್ತುಗಳು ಮತ್ತಷ್ಟು...

ರುಬಾಯತ್ತು ೫

ಆ ತತ್ತ್ವ ಈ ತತ್ತ್ವ ಎಲ್ಲ ತತ್ತ್ವಗಳಲ್ಲು
ಒಂದೊಂದು ನುಡಿಮುತ್ತ ಹೆಕ್ಕಿ ಬಂದು,
ಮಧುಪಾತ್ರೆ ಮಧುಮತಿಯ ಸಾಂಗತ್ಯ ಪಡೆದವನ
ಕೊರಳಲ್ಲಿಹೊಮ್ಮುವುದು ತತ್ತ್ವಸಾರ.

ರುಬಾಯತ್ತು ೬

ನನ್ನೆದೆಯ ಹರವಿನಲ್ಲಿ ನೀನ್ ತಲೆಯ ಹರಡಿರಲು
ನನ್ನ ತನು ನಿನ್ನ ಬಿಸಿ ನಿನ್ನೆದೆಯ ಮಿದು ಮಿಂದು
ಸುಖದ ತುದಿ - ಹೊರಗೆ ಮಳೆ ಮೆಘರಾಗದ ಗುನುಗು
ಅಂಗಳದಿ ನಲುಗಿತ್ತು ನಾಗದಾಳಿ.

ರುಬಾಯತ್ತು೭

ಈ ಸಂಜೆ ಬಲು ಸೊಗಸು ನೀನೆನ್ನ ಬಳಿಯಿರಲು
ತೆಂಗಿನೆಲೆಗಳ ಬಳುಕು ಅರ್ಧ ಬೆಳಕು.
ತಂಪನೆಯ ತಂಗಾಳಿ ಜಡಿಮಳೆಯ ತೀನ್ತಾಳ
ತಾರದಾಚೆಯ ಗೀತ ತೀರ ತಟ್ಟಿ..

ರುಬಾಯತ್ತು೮

ಭೂಮಿಯದು ತಿರುಗುವುದು ತನ್ನ ಕಕ್ಷೆಯ ಸುತ್ತ
ನಾ ಮನುಜ ತಿರುಗುವೇನು ಅದರ ಪರಿಧಿಯನರಸಿ
ಭೂಮಿ ತಾ ಸುತ್ತುತ್ತ ನಾನವಳ ಸುತ್ತುತ್ತ
ಆಕರ್ಷಚಕ್ರದಲಿ ನಿರ್ವ್ಯಾಜ ಪ್ರೇಮ!

ರುಬಾಯತ್ತು೯

ಹಾಗೊಂದು ರಾತ್ರಿಯಲಿ ವಿರಹಧಗೆ ಮೈಸುತ್ತು
ಪ್ರಿಯತಮೆಯ ಸಾನ್ನಿಧ್ಯಕಾಗಿ ಒರಲಿ
ಬೀಳ್ಕೊಡುವ ಈ ಗಳಿಗೆ ಎದೆಯ ಪ್ರಾಂಗಣ ಉಕ್ಕಿ
ಹೃದಯಮಂಜೂಷೆಯಲನೂಹ್ಯ ರಾಗ.

ರುಬಾಯತ್ತು೧೦

ನಡುರಾತ್ರಿ ವೈರಾಗ್ಯ ಪಡೆದು ನಾ ಹೊರಬಿದ್ದು
ಊರ ನಡುವೀಥಿಯಲಿ ಸಿದ್ಧಿಯರಸಿ.
ಉದುಪತಿಯ ಹೊಳೆಯು chaKOrananu ಒಲಿಸುತಿರೆ
ಭಾವರಾಗದೊಳಗೆ ನಾ ಊಹ್ಯವನು ಕಂಡೆನ್..

ಮತ್ತೆ ಸಿಗ್ತೇನೆ....

Thursday, May 28, 2009

ಹೊಸ ದಿನ, ಹಳೆ ಮಾತು .

ಗೆಳೆಯರ ಸ್ವಾಗತಕ್ಕೆ, ಪ್ರೀತಿಯಿಂದ...

ರುಬಾಯತ್ತುಗಳೆಂದರೆ, ಯಾವುದೇ ವಿಷಯವೊಂದನ್ನು ಕೇವಲ ನಾಕೇ ಸಾಲುಗಳಲ್ಲಿ ಹಿಡಿದಿದಬಹುದಾದ ಒಂದು ಪದ್ಯಪ್ರಕಾರ.
ಇಲ್ಲಿ ನಿಮಗೆ ವಿಷಯದ ವಿವರಣೆಗಿಂತ ಅದರ ಘನತೆ ಮುಖ್ಯವಾಗುತ್ತದೆ. ಮೇಲ್ನೋಟಕ್ಕೆ ಸುಮ್ಮನೆ ನಾವು ಕಷ್ಟದ ಸಂಗತಿಯಿದು ಎಂದು ಸುಲಭದಲ್ಲಿ ಹೇಳಿಬಿದಬಹುದಾದರೂ ಕೊಂಚ ಆಸಕ್ತಿ, ಹೊಸ ಹವ್ಯಾಸ ಮತ್ತು ಜಿಜ್ಞಾಸೆ, ವ್ಯಕ್ತಿಗತ.
ಇಲ್ಲಿ ಹೊರಹಾಕುತ್ತಿರುವ ನನ್ನ ರುಬಾಯತ್ತುಗಳಲ್ಲಿ ನಿಮಗೆ ಡಿವಿಜಿಯವರ ಉಮರ್ ಖಯ್ಯಾಮನ ರುಬಾಯತ್ತುಗಳ ಅನುವಾದ "ಉಮರನ ಒಸಗೆ"ಯಾ ತೀವ್ರ ಛಾಯೆ ಕಂಡೀತು. ಒಪ್ಪಿಕೊಳ್ಳಬೇಕು. ನೆರಳಿಲ್ಲದೆ ಬೀಜ ಕುದಿಯೊದೆಯುವುದಿಲ್ಲ ಅಂತ ನನ್ನ ಭಾವನೆ. ಇವುಗಳನ್ನು ಬರೆಯಲು ಹಣುಕಿದ್ದು ನಾಲ್ಕು ವರ್ಷಗಳ ಹಿಂದೆ... ಅಂದಿನಿಂದ ಇಂದಿನವರೆಗೆ ಅನೂಚಾನವಾಗಿ ಕ್ಲಾಸ್ರೂಮಿನ ಕೊನೆಯ ಬೆಂಚಿನಲ್ಲಿ, ಕ್ರಿಕೆಟ್ ಗ್ರೌಂಡಿನ ಶೂನ್ಯವೇಳೆಯಲ್ಲಿ, ಕಾಲೇಜು ಕ್ಯಾಂಟೀನಿನಲ್ಲಿ, ಅವಳಿಗಾಗಿ ನನ್ನನ್ನು ಯಾವಾಗಲೂ ಕಾಯಿಸುತ್ತಿದ್ದ ದಾವಣಗೆರೆ ಬಸ್ ಸ್ಟ್ಯಾಂಡಿನಲ್ಲಿ, ಓದಲೆಂದು ಕೂರುತ್ತಿದ್ದ ಸಂಜೆಯ ಗದ್ದೆಬಯಲಿನಲ್ಲಿ, ಬಾಥ್ರೂಮಿನಲ್ಲಿ, ತೋಇಲೆತ್ತಿನಲ್ಲಿ, ಗಡಂಗಿನಲ್ಲಿ, ಏಕಾಂತದ ನೋವಿನಲ್ಲಿ, ಗಲಾಟೆಯ ಅಬ್ಬರದಲ್ಲಿ, ..... ಹೀಗೆ ಹೋದಲ್ಲೆಲ್ಲ ಹುಟ್ಟಿದ ನನ್ನ ನೂರಾರು ರುಬಾಯತ್ತುಗಳು ಇನ್ನು ನಿಮ್ಮ ಮುಂದೆ.......


ರುಬಾಯತ್ ೨

ದೇವನೆಮ್ಬನ ರೂಪ ಹಲವಾರು ಬಗೆಯಲ್ಲಿ
ನಾಸ್ತಿಕರ ಕರೆವಲ್ಲಿ ಶೃಂಗಾರವಾಗಿ.
ಕಂಡು ನಾ ನಿಂತಲ್ಲೇ , ಭಾವರಸ ಒಳಗೆಲ್ಲ
ತಡೆಯಲಾಗದೆ ಮನೆಯ ರತಿಗಾಗಿ ಬಂದೆನ್.

ರುಬಾಯತ್ ೩

ಸಂಗೀತಶಾಸ್ತ್ರವನ್ನು ಬರೆದರೆದು ಸಾಮ್ರಾಟ
-ನಾದವನ ಬಳಿ ಸಾರಿ ಶಿಷ್ಯತ್ವ ಕೋರಿ,
ದಪ್ಪ ಹೊತ್ತಿಗೆಗಳನು ಹೊತ್ ಹೊತ್ತು ಸಾಕಾಗಿ
ನಡುರಾತ್ರಿ ನಡೆದಿದ್ದೆ ರಫಿಯ ಮನೆಗೆ.

ರುಬಾಯತ್ ೪

ಆ ಸಖಿಯ ಒಲವಿನಾ ಮಂದ್ರ ಸಾಗರದಲ್ಲಿ
ಮುಳುಗುತ್ತ ತೇಲುತ್ತ ಸುಖಿಸುತ್ತ ಇರಲು.
ಉಂಟು-ಇಲ್ಲ-ಗಳೆಂಬ ದ್ವಂದ್ವದಲಿ ತಲೆತಿರುಗಿ
ಮೂರು ದಿನಗಳ ಸುಖದಿ ತತ್ವ ನೋಡಿದೆನು.

ರುಬಾಯತ್ತುಗಳಿಗೆ ಸದ್ಯ ವಿರಾಮ ಹಾಕುತ್ತ...


ಆ ಮೂರು ಗುಲಾಬಿಗಳು

ಪೇಟೆಯ ಹೂವಿನಂಗದಿಯಿಂದ ತಂದಿದ್ದು,
ಮಡದಿಯ ಮುದಕ್ಕಾಗಿ,
ಒಂದು ಬಿಳಿ, ಹಳದಿ ಮತ್ತೊಂದು, ಮಗದೊಂದು ಹಳದಿ-ಬಿಳಿ.

ಅರ್ಧ ಬಿರಿದ ಅವುಗಳ ಮುಖ,
ಸುವಾಸಿತ ಮೂಗು,
ಮೊಗ್ಗು- ಮೈ ಮರೆಸುವ ಬಿರಿದ ತುಟಿ.

ಹಗಲೆಲ್ಲ ಕನಸಿದ್ದು, ರಾತ್ರಿ ಕನವರಿಸಿದ್ದು,
ಮಧ್ಯವಯಸ್ಸಿನಾಚೆಗೆ ದಬ್ಬುವ
ವಯೋಶ್ವಕ್ಕೊಂದು ಲಗಾಮು.
ಆ ಮೂರು ಗುಲಾಬಿಗಳು,
ಆ ಮೊಗ್ಗು ಸುವಾಸನೆ,
ಮತ್ತು ಮೈಮರೆವು.

gaadha kattaleya ಆಳದಿಂದೆದ್ದು ಹರಿದು
ಚಿಮ್ಮುವ ನೆನಪಿನ ಸುಳಿಗಳು,
ಸುರುಳಿ ಬಿಚ್ಚುತ್ತಾ,
ಪದರಗಳ ಪರದೆ ತೆರೆದುಕೊಳ್ಳುತ್ತಾ,
ಸ್ಮೃತಿ ಪರದೆ ಬಣ್ಣ ಬಣ್ಣಗಳ ಮನೋರಂಜನ.

ಅವರು ಹಾಗೆ ತಂದಿದ್ದು ಆ ಮೂರು
ಗುಲಾಬಿಗಳು,
ಹಣೆಯ ಮೇಲಿನ ನೆರಿಗೆ ನಾಚಿತ್ತು,
ನಡು ನಡುಗಿತ್ತು,
ಆ ಮೂರು ಗುಲಾಬಿಗಳು,
ಜೀವನ್ಮಯ.

ಕಳೆದ ಯೌವನದ ಅವಳು,
ಪಕ್ಕದ ಮನೆಯ ಹುಡುಗಿ,
ಪ್ರಿಯಕರನಿತ್ತ ಮೊದಲ ಗುಲಾಬಿ,
ತಂದು ತೋರುವ ಜತನತೆ,
ಕಂಗಳು ಗುಲಾಬಿ ಬಟ್ಟಲು....

ಮಲಗುತ್ತೇನೆ ಗುಲಾಬಿಗಳ ಗುಚ್ಚವನ್ನು
ತಲೆದಿಮ್ಬಿಗಾನಿಸಿ ಪಕ್ಕದಲ್ಲಿ ಮೃದುವಾಗಿ....
ನಮ್ಮಿಬ್ಬರ ಮಧ್ಯೆ - ದೃಢವಾಗಿ,
ಬಂಧ ಮಂಪರು-
ಬಣ್ಣದ ನೆನಪು,
ಕನಸ ಕನಸಿದ ಭೂತಕಾಲ.
ವರ್ತಮಾನದ ಸುರುಳಿ ವರ್ತಿಗಳ
ತುದಿಯಲ್ಲಿ, ಮೈಯ ಬಿಸಿಯಳುಗಿನ ತುದಿ-
ನಮ್ಮಿಬ್ಬರ ಮಧ್ಯೆ - ಆ ಮೂರು ಗುಲಾಬಿಗಳು.

ಬಿಡುವುದಿಲ್ಲ ಆ ಗುಚ್ಚವನ್ನು,
ಸೆರಗಿನ ತುದಿಯಲ್ಲಿ ಮೃದುವಾಗಿ ಬಳಸಿ ಸುತ್ತಿ,
ಪರಿಮಳದ ಗುಂಗಿನಲ್ಲಿ
ಪದೇ ಪದೇ ಒಯ್ಯುತ್ತ ಮುಖದ ಮುಂದೆ....
ಕಣ್ಣಂಚಿನ ಹೊಳಪು- ಸಾವಿರ ಭಾವನೆಗಳು
ಚಿಮ್ಮುತ್ತಿವೆಯೋ ಎಂಬಂತೆ.

ಆಕಸ್ಮಿಕ ಕರೆದುಬಿದುತ್ತದೆ ಕನ್ನಡಿ!
ಚಿರ ಯೌವನೆಯಂತೆ,
ಕನ್ನಡಿ ಸುಳ್ಳುಬುರುಕ!
ಅಲ್ಲಿ ಅನ್ನ ಗಂಜಿಯಾಗಿರುತ್ತದೆ,
ನಗುತ್ತ ಮರೆತಿರುತ್ತೇನೆ ನನ್ನಷ್ಟಕ್ಕೇ.
ಛೆ,
ನಾನೆಂಥ ಹುಚ್ಚಿ.
ಅವರು ತಿನ್ನುತ್ತಾರೆ ಖುಷಿಯಿಂದ,
mukhadalli ಬಿರಿದ ಗುಲಾಬಿಯ ನಗು.

ಆ ಮೂರು ಗುಲಾಬಿಗಳು,
ಒಣಗುತ್ತವೆ,
ದಳಕಳೆದು ಬುಡವನ್ನು ಕಳಚಿಕೊಳ್ಳುವಂತೆ ಸ್ವತಂತ್ರ!

ಕಪ್ಪು ಹಿಡಿಯುತ್ತದೆ ದಳಗಲಂಚು,
ವಯಸ್ಸಾಗುವಂತೆ ಅವಕ್ಕೂ...

ವಯಸ್ಸು ಜಾರಿ ಜಾರಿ ಹಿಂದೆ ಹಿಂದೆ..
bhootadaaLakke, ಭವಿಷ್ಯದ ವಯೋಮಾನ ಹಿಂದಕ್ಕೆ...
ಮುದಮರದ ಗತ್ತಿಬೇರು.
ಹಸನು-ಹಸಿರು ಕ್ಷಣದ ಲಜ್ಜೆ. ಸದೈವಾರ್ದ್ರ..
ಆ ಮೂರು ಗುಲಾಬಿಗಳು......



ಮತ್ತೆ ಸಿಗೋಣ.....

Wednesday, May 27, 2009

ಮೀನಹೆಜ್ಜೆ ...

ಹಾಯ್ , ಮೀನಹೆಜ್ಜೆ ಅಂತ ನನ್ನ ನಡೆಯನ್ನು ನಾನೇ ಕರೆದುಕೊಂಡು ನಿಮ್ಮೆದುರು ಇದುವರೆಗೆ ಕಾಣದ ಈ ಹೆಜ್ಜೆಗಳನ್ನು ಇಡಲು ಹೊರಟಿರುವ , ಕಣಾದರಾಘವ ಅಂತ ನನ್ನ ಹೆಸರು . ವೃತ್ತಿಯಲ್ಲಿ ನಾನು ಆಯುರ್ವೇದ ವೈದ್ಯ. ಬರೆಯುವುದು ತೀರದ ಹವ್ಯಾಸ ಮತ್ತು ತೀರವೊಂದಕ್ಕಾಗಿ ನನಗೆ ನಾನೇ ಕಂಡುಕೊಂಡ ಮೀನಹೆಜ್ಜೆ.

ಕಥೆ, ಕವಿತೆ ಮತ್ತು ನಾಟಕಗಳನ್ನು ಬರೆಯುತ್ತ , ಹಾಗೆ ಬರೆದ ಪ್ರತಿಗಳನ್ನು ಕಪಾಟಿನಲ್ಲಿ ಪೇರಿಸುತ್ತ , ಸಾಹಿತ್ಯಾಸಕ್ತರು ಮನೆಗೆ ಬಂದಾಗ ಮಾತ್ರ ಅವುಗಳಿಗೊಮ್ಮೊಮ್ಮೆ ಮುಕ್ತಿ ಕೊಡುತ್ತ , ಪುಕ್ಕಟೆ ಶಭಾಶ್ಗಿರಿಯ ಭಾರವನ್ನು ಹೆಗಲ ಮೇಲೆ ಹೊತ್ತು ಬೀಗುತ್ತ, ತೀರ ಸೋಮಾರಿಯಾಗಿ ನಾನಾಯಿತು, ನನ್ನ ಕ್ಲಿನಿಕ್ಕಾಯಿತು ಎಂಬಂತಿದ್ದ ನನ್ನ ೧೯೪೭ ರ ಮನಸ್ಸನ್ನು ಬದಲಾಯಿಸಿದ್ದು ಬ್ಲಾಗ್ ಲೋಕ. ಗೆಳಯ ಶ್ರೀನಿಧಿ ಮುಂಚೆಯಿಂದಲೂ ಕರೆಯುತ್ತಿದ್ದ,, ಬಾರಯ್ಯ, ಬರಿ, ....ಬಂದಿದ್ದೇನಯ್ಯ..

ಉಮರ್ ಖಯ್ಯಾಮನ ರುಬಾಯತ್ತುಗಳಿಂದ , ತೀವ್ರ ಪ್ರೇರಿತನಾಗಿ ರುಬಾಯತ್ತುಗಳ ರಚನೆಯಲ್ಲಿ ತೊಡಗಿದ್ದೇನೆ, ನಿಮಗಾಗಿ.....

ರುಬಾಯತ್ತುಗಳು


(೧)
ಒಂದು ದಿನ ಬಾಲ್ಯದಲಿ ವಿಜ್ಞಾನಮನೆ ಹೊಕ್ಕು
ಏನಿದರ ಮರ್ಮವದು ಅರಿಯಬಯಸಿ.
ಗೋಡೆ ಸಾಲುಗಳಲ್ಲಿ ದೇವದೇವರ ಚಿತ್ರ
ಕಂಡು ನಾ ಹಾರಿದ್ದೆ ಹೆಂಡದಂಗಡಿ ಕಡೆಗೆ.



ಪ್ರತಿಕ್ರಿಯಿಸಿ, ನಿರೀಕ್ಷಿಸಿ... ನಿಮ್ಮವ,
ಕಣಾದ..