Tuesday, September 29, 2009

ಅಗ್ನಿವರ್ಣ

ಉರಿಯುತ್ತದೆ, ಕರಗುತ್ತದೆ,
ಕರಗಿಸುತ್ತದೆ ಹರಡುತ್ತ..

ಸುತ್ತಲ ಅವಕಾಶವನ್ನು ಬಂಗಾರದ ಬಣ್ಣದಲ್ಲಿ ಮೀಯಿಸುತ್ತ
ಜಾದೂಗಾರನ ಕೈಯಲ್ಲಿ ಬಣ್ಣ ಬದಲಿಸುವ ಬೆಂಕಿಯ ಮೂಲದಗ್ನಿಗೆ ಒಂದೇ ಮುಖ.

ಸಮಿತ್ತುಗಳ ಆಹುತಿಯಲ್ಲಿ ಹುಟ್ಟುವ
ಯಜ್ನಕುಂಡದ ಅಗ್ನಿಗೆ ದೇವತಾಭಾವ.
ಸುತ್ತ ಶತರುದ್ರ - ಚಂಡೀ - ಮಂಗಳ- ಸ್ವಸ್ತಿ
ಮಂತ್ರಪುಷ್ಪ.
ಘನ ಪಾಠಿಗಳ ಗಂಟಲಿನಿಂದ ಚಿಮ್ಮುವ ನಾದಾಗ್ನಿಯ ಸಮೀಕರಣ,
ಯಜ್ಞಕುಂಡದಿಂದ ಚಿಮ್ಮುವ ಕಲ್ಯಾಣಾಗ್ನಿಯ ಜ್ವಾಲೆಗಳೊಂದಿಗೆ.
ರುದ್ರ ಜಾಗ್ರತ ದೃಷ್ಟಿ , ಶ್ರವಣ.


ಮಹಾಭೂತದಿಂದ ಹೊರಬಂದು ಅಗ್ನಿ ಬೆಂಕಿಯಾದಾಗ
ಮುಖಗಳೂ ಹಲವಾರು, ಪ್ರಭಾವವೂ.

ಮಿಥುನಕ್ಕೆ ಮೀಸಲಿಟ್ಟ ಥಂಡಿಕೋಣೆಯ ಅಗ್ಗಿಷ್ಟಿಕೆಯಲ್ಲಿ
ವಾಜೀಕರ ಬೆಂಕಿಯಿಂದ ನಿರಂತರ ಕಾಮೋನ್ಮಾದ.
ಮನ್ದಾಗ್ನಿಯಿಂದ ಹತ್ತು ಇಂದ್ರಿಯಗಳೂ ಜಾಗ್ರತ.
ಬೆಳಗೆದ್ದು ಮುಲುಕುವ ಮಿಥುನದ ಮುಖದಲ್ಲಿ ಉಳಿವ ಬೂದಿ,
ಚಳಿಯಲ್ಲಿ ಅರಳಿದ ಮೈ ಮನದ ಪ್ರಭಾವ.

ಹಗಲೆಲ್ಲ ಬಿಸಿಯ ವಿಪರೀತದ ಭಾವಕ್ಕೆ ಚಡಪಡಿಕೆ ಮತ್ತೆ.
ಮತ್ತೆ ಚಡಪಡಿಕೆ ರಾತ್ರಿಯೆಲ್ಲ ಚಳಿಯ ವಿಪರೀತದ ಭಾವಕ್ಕೆ.

ಬಿಸಿ ಚಳಿಯ ಸಂಘರ್ಷ,
ಅಗ್ಗಿಷ್ಟಿಕೆಯ ಬೆಂಕಿ.

ಅಷ್ಟಗಲ ಚಿತೆಯ ಚಟಪಟ ಜ್ವಾಲೆಗಳಲ್ಲಿ,
ಆತ್ಮನ ಮಹಾಸ್ಫೋಟ.
ಸುತ್ತ ಮೌನ ಸ್ಮಶಾನ.
ಸತ್ತ ಹೆಣದ ಮೇಲೆ ಮತ್ತೆ
ದೇವತಾಭಾವ.

ಜೀವಾಗ್ನಿಗೆ ಅಗ್ನಿಯಿಂದಲೇ ಮುಕ್ತಿ.
ಬೆಂಕಿ ಕರಗುತ್ತದೆ, ಬೆಂಕಿಯಿಂದಲೇ.

ಯಜ್ಞಕುಂಡದ ಬೆಂಕಿ
ರಾತ್ರಿ ಮಿಥುನದಲ್ಲಿ ಕರಗಿ
ಮಾರನೆಯ ದಿನ ಚಿತೆಯೇರಿ
ಮಹಾಭೂತವಾಗುತ್ತದೆ.

Saturday, September 26, 2009

ಮತ್ತೆರಡು ರುಬಾಯತ್ತುಗಳು


ಧರೆಗಿಳಿದು ಬಂದಳೋ ಕಪ್ಪುಸುಂದರ ರಾತ್ರಿ
ನಿಬ್ಬೆರಗು ಭುವಿಯವಳ ಛಾಯೆಯಲಿ ಕಪ್ಪು,
ಹಣತೆ ಬೆಳಗಿಸಿ ಕದವ ತೆರೆದಿತ್ತು ಬಾ ಸಖಿಯೆ
ಮನೆ ಮನವು ತೆರೆದಿರಲಿ ಮಧುಪಾತ್ರೆಯಂತೆ.


ನೋಡಲ್ಲಿ ನಲ್ಬೆಳಗು ಬಾನ ತುದಿಯಲಿ ಮೂಡಿ
ರವಿಚಂದ್ರ ನಕ್ಷತ್ರರಾಟ ಜೂಟಾಟ!
ಮಧುರತಿಯ ತೋಷದಲಿ ದೇಹವರಳಿದೆ ರಾತ್ರಿ
ಮುದ್ದು, ಬೆಳಗಲಿ ಮಿಂದು ಆತ್ಮವರಳಲಿ ಬಾರೆ..