Thursday, October 22, 2009

ಜನಿವಾರದ ಮರ

ಆ ಕುಂಡದಲ್ಲಿ ಬಂದು
ಬಿದ್ದದ್ದು ಅದೊಂದೇ ಬೀಜ.

ಆಕಾಶ ನೀರೆರೆಯಿತು,
ಗಾಳಿ ಗೊಬ್ಬರ.
ಕ್ಷೇತ್ರ ಹದಗೊಂಡು ನೀರಲ್ಲಿ ಮಿದುಗೊಂದು
ಬೀಜ ಕುಂಡದ ಮಣ್ಣಿನೊಳಗೆ
ಬೆದೆಗೊಳ್ಳತೊಡಗಿತು...
ಎಲ್ಲಿಂದಲೋ ಎರೆಯುತ್ತ ಬಂದು
ಮಣ್ಣ ಹದವನ್ನು ಮಿದುಮಾಡುತ್ತ
ಆ ಎರೆಹುಳ, ಬೀಜದ ಸುತ್ತ
ಸುತ್ತತೊಡಗಿತು....

ಒಂದು ದಿನ,
ತನ್ನನ್ನು ಪೋಷಿಸಿದ
ಕುಂದದೊಳಗಿನ ಮಣ್ಣ
ಮೇಲ್ಪದರವನ್ನು ಭೇದಿಸಿ
ಸಿಳಾರನೆ
ಹೊರಬಿತ್ತು ಹಸಿರು_ಕಂದು
ಅಂಕುರ.

ಸುದ್ದಿಯಾಯಿತು ಊರೆಲ್ಲ.
ಕುಂಡದೊಳಗೆ ಹುಟ್ಟಿದ ಅಶ್ವತ್ಥದ
ಅಂಕುರದ ಸುತ್ತ
ಸತ್ತ ಎರೆಹುಳ.
"ನಾಲವೇಷ್ಟ ಜನನ"!

ಜಮಾಯಿಸಿತು ಪುರೋಹಿತವರ್ಗ,
ಪುರೋಗಾಮಿಗಳು ನಕ್ಕರು,
ಹೆಂಗಳೆಯರು ಅತ್ತರು,
ಊರ ಮಕ್ಕಳನ್ನೆಲ್ಲ ಆವರಿಸತೊಡಗಿತು
ಬಾಲಗ್ರಹ,
ಕಂದ-ಪೈಶಾಚ-ಸರ್ಪ-ವೈಕರ್ತನ.

ಶಾಂತಿಯಾಗಬೇಕು........

ತೆಂಗಿನಕಾಯಿಯಿಂದ ಹೊಡೆದರು
ಕುಂಡದ ಗೋಡೆಗಳಿಗೆ,
ಅವು ಒಡೆದು ಹೋದವು.
ತೆಂಗಿನ ಕಾಯಿ ನಕ್ಕಿತು.

ಅಶ್ವತ್ಥದ ಪುಟ್ಟ ಅಂಕುರವನ್ನು
ಕುಂಡದ ಮಣ್ಣ ಸಮೇತ
ಊರ ನಡುವಿನಲ್ಲಿ ನೆಟ್ಟರು,

ಹಾಲೆರೆದರು,
ನೀರೆದರು,

ಹವನಗಳು ಆಗಿಹೋದವು
ಲೆಕ್ಕವಿಲ್ಲದಷ್ಟು,
ಸುತ್ತ ಕಾಡು ಬರಿದಾಯಿತು.

ವರ್ಷಗಳೇ ಕಳೆದುಹೋದವು...


...................................


ಊರ ನಡುವಿನ ಅಶ್ವತ್ಥದ
ಸುತ್ತ ಕಟ್ಟಿದ ಕಟ್ಟೆಯ ಮೇಲೆ,

ಹಳೆ ಮುಖಗಳ
ಭೂತ ಕನ್ನಡಕದ
ಭೂತ ದೃಷ್ಟಿಯ ಕಣ್ಣುಗಳು,

ಹೊಸಮುಖಗಳ
ಹೊಸತನ್ನು ಹುಡುಕುವ-ಹೊಸೆಯುವ
ಕಣ್ಣುಗಳು,

ಅಶ್ವತ್ಥ ಸುತ್ತುವ
ಬಂಜೆ ಹೆಂಗಸರ
ಆರ್ತ ಕಣ್ಣುಗಳು,

ಸುತ್ತ ಬಿಳಲುಗಳಲ್ಲಿ
ಜೋಕಾಲಿ ಜೀಕುವ
ಚಿಣ್ಣರ ಹೊಳೆವ ಕಣ್ಣುಗಳು...

ಅಶ್ವತ್ಥ ಸೊಂಪಾಗಿ ಬೆಳೆದು
ಹರಡಿ ನಿಂತಿದೆ.
ಅದರ ಬೃಹತ್ ಕಾಂಡದ ಸುತ್ತ ಕಟ್ಟಿದ ಉದ್ದ
ಜನಿವಾರ,
ಭೂತವನ್ನು ನೆನಪಿಸುತ್ತದೆ.
ಅಶ್ವತ್ಥ ನೆನಪಿಸಿಕೊಳ್ಳುವುದಿಲ್ಲ.

Tuesday, September 29, 2009

ಅಗ್ನಿವರ್ಣ

ಉರಿಯುತ್ತದೆ, ಕರಗುತ್ತದೆ,
ಕರಗಿಸುತ್ತದೆ ಹರಡುತ್ತ..

ಸುತ್ತಲ ಅವಕಾಶವನ್ನು ಬಂಗಾರದ ಬಣ್ಣದಲ್ಲಿ ಮೀಯಿಸುತ್ತ
ಜಾದೂಗಾರನ ಕೈಯಲ್ಲಿ ಬಣ್ಣ ಬದಲಿಸುವ ಬೆಂಕಿಯ ಮೂಲದಗ್ನಿಗೆ ಒಂದೇ ಮುಖ.

ಸಮಿತ್ತುಗಳ ಆಹುತಿಯಲ್ಲಿ ಹುಟ್ಟುವ
ಯಜ್ನಕುಂಡದ ಅಗ್ನಿಗೆ ದೇವತಾಭಾವ.
ಸುತ್ತ ಶತರುದ್ರ - ಚಂಡೀ - ಮಂಗಳ- ಸ್ವಸ್ತಿ
ಮಂತ್ರಪುಷ್ಪ.
ಘನ ಪಾಠಿಗಳ ಗಂಟಲಿನಿಂದ ಚಿಮ್ಮುವ ನಾದಾಗ್ನಿಯ ಸಮೀಕರಣ,
ಯಜ್ಞಕುಂಡದಿಂದ ಚಿಮ್ಮುವ ಕಲ್ಯಾಣಾಗ್ನಿಯ ಜ್ವಾಲೆಗಳೊಂದಿಗೆ.
ರುದ್ರ ಜಾಗ್ರತ ದೃಷ್ಟಿ , ಶ್ರವಣ.


ಮಹಾಭೂತದಿಂದ ಹೊರಬಂದು ಅಗ್ನಿ ಬೆಂಕಿಯಾದಾಗ
ಮುಖಗಳೂ ಹಲವಾರು, ಪ್ರಭಾವವೂ.

ಮಿಥುನಕ್ಕೆ ಮೀಸಲಿಟ್ಟ ಥಂಡಿಕೋಣೆಯ ಅಗ್ಗಿಷ್ಟಿಕೆಯಲ್ಲಿ
ವಾಜೀಕರ ಬೆಂಕಿಯಿಂದ ನಿರಂತರ ಕಾಮೋನ್ಮಾದ.
ಮನ್ದಾಗ್ನಿಯಿಂದ ಹತ್ತು ಇಂದ್ರಿಯಗಳೂ ಜಾಗ್ರತ.
ಬೆಳಗೆದ್ದು ಮುಲುಕುವ ಮಿಥುನದ ಮುಖದಲ್ಲಿ ಉಳಿವ ಬೂದಿ,
ಚಳಿಯಲ್ಲಿ ಅರಳಿದ ಮೈ ಮನದ ಪ್ರಭಾವ.

ಹಗಲೆಲ್ಲ ಬಿಸಿಯ ವಿಪರೀತದ ಭಾವಕ್ಕೆ ಚಡಪಡಿಕೆ ಮತ್ತೆ.
ಮತ್ತೆ ಚಡಪಡಿಕೆ ರಾತ್ರಿಯೆಲ್ಲ ಚಳಿಯ ವಿಪರೀತದ ಭಾವಕ್ಕೆ.

ಬಿಸಿ ಚಳಿಯ ಸಂಘರ್ಷ,
ಅಗ್ಗಿಷ್ಟಿಕೆಯ ಬೆಂಕಿ.

ಅಷ್ಟಗಲ ಚಿತೆಯ ಚಟಪಟ ಜ್ವಾಲೆಗಳಲ್ಲಿ,
ಆತ್ಮನ ಮಹಾಸ್ಫೋಟ.
ಸುತ್ತ ಮೌನ ಸ್ಮಶಾನ.
ಸತ್ತ ಹೆಣದ ಮೇಲೆ ಮತ್ತೆ
ದೇವತಾಭಾವ.

ಜೀವಾಗ್ನಿಗೆ ಅಗ್ನಿಯಿಂದಲೇ ಮುಕ್ತಿ.
ಬೆಂಕಿ ಕರಗುತ್ತದೆ, ಬೆಂಕಿಯಿಂದಲೇ.

ಯಜ್ಞಕುಂಡದ ಬೆಂಕಿ
ರಾತ್ರಿ ಮಿಥುನದಲ್ಲಿ ಕರಗಿ
ಮಾರನೆಯ ದಿನ ಚಿತೆಯೇರಿ
ಮಹಾಭೂತವಾಗುತ್ತದೆ.

Saturday, September 26, 2009

ಮತ್ತೆರಡು ರುಬಾಯತ್ತುಗಳು


ಧರೆಗಿಳಿದು ಬಂದಳೋ ಕಪ್ಪುಸುಂದರ ರಾತ್ರಿ
ನಿಬ್ಬೆರಗು ಭುವಿಯವಳ ಛಾಯೆಯಲಿ ಕಪ್ಪು,
ಹಣತೆ ಬೆಳಗಿಸಿ ಕದವ ತೆರೆದಿತ್ತು ಬಾ ಸಖಿಯೆ
ಮನೆ ಮನವು ತೆರೆದಿರಲಿ ಮಧುಪಾತ್ರೆಯಂತೆ.


ನೋಡಲ್ಲಿ ನಲ್ಬೆಳಗು ಬಾನ ತುದಿಯಲಿ ಮೂಡಿ
ರವಿಚಂದ್ರ ನಕ್ಷತ್ರರಾಟ ಜೂಟಾಟ!
ಮಧುರತಿಯ ತೋಷದಲಿ ದೇಹವರಳಿದೆ ರಾತ್ರಿ
ಮುದ್ದು, ಬೆಳಗಲಿ ಮಿಂದು ಆತ್ಮವರಳಲಿ ಬಾರೆ..

Sunday, August 2, 2009

ಅವಳ ವಸಂತ...

ಅದು ವಸಂತ.

ಅವಳು ಮತ್ತು ನಾನು,

ಎಂದಿನಂತೆ ನಮ್ಮ ಅಮರ ಪ್ರೇಮಕ್ಕೆ

ಸಾಕ್ಷಿಯಾಗಿದ್ದ

ದೊಡ್ಡ ಮಾವಿನಮರ.

ಪ್ರಕೃತಿ ಚೆಂದವಿತ್ತು.

ಅವಳು ಕವಿಯಾಗು ಎಂದಳು.

ಮುಖವಾಡವನ್ನು ಚಾಚಿ ಧರಿಸಿದೆ..

"ಕೋಗಿಲೆಯು ಕೂಗುವುದು ಪ್ರಕೃತಿ ಗೀತ.

ಭೂಕಂಪ ಸಂತ್ರಾಸ ಭೂಮಿಗೇ ತಾನೆ!

ನಿನ್ನ ಅಂಗಿಗೆ ಎಷ್ಟು ಗುಂಡಿಗಳು ಉಂಟೋ

ಹೊಸ ಹಾಳೆ ಮೂಸಲದೆಂಥ ರಮ್ಯ!"

ಅವಳ ಮುಂಗುರುಳು ಹಣೆಯ ತುಂಬ

ಹರಡಿ ಮತ್ತೆ ಯಥಾಸ್ಥಿತಿಯಲ್ಲಿ ನಿಂತಿತು.

ಅರ್ಥವಾಗಲಿಲ್ಲವೆಮ್ಬುದು ನನಗೂ ಅರ್ಥವಾಯಿತು..

ಮನಸ್ಸರಳಿತು..

ಮುಖವಾಡ ಕಳಚಿಟ್ಟೆ

"ನಿನ್ನ ನಾಚಿಕೆ ಛಂದ - ಚಂದ ಪರದೆಯ ಹಿಂದೆ

ಚಂದ - ಛಂದದಿ ಪದ್ಯ ಬರೆದಿಟ್ಟ ಹಾಗೆ..

ಮಧ್ಯರಾತ್ರಿಯ ಚಂದ್ರ ಘುಲಾಮಲಿ ಗಜಲುಗಳು

ಹಳೆ ಮದ್ಯದಾ ಶೀಶೆ ಜತೆಗಿದ್ದ ಹಾಗೆ.."

ಅವಳು ನಕ್ಕಳು,

ಮಳೆಗಾಲದ ಪ್ರಕೃತಿಯಂತೆ..

"ಕೋಗಿಲೆಯ ಕುಲದಲ್ಲಿ ಕೊಲಾಹಲವೆದ್ದಿತ್ತು

ನಿದ್ದೆಯಿಂದಾಗಷ್ಟೆ ಎದ್ದವೋ ಎಂಬಂತೆ

ಕೂಕುಹೂಗಳ ರಿಂಗನದಿ ಮರಗಳೆಲೆ

ಗಳೆಲ್ಲವೂ ಕೋಗಿಲೆಯ ಹಸಿರು ರೂಪ."

ವಸಂತ ಕಳೆದ.

Saturday, August 1, 2009

ಪಾಟಿಚೀಲ

ಪಾಟಿ ಚೀಲವೆಂಬ
ಶಾಲೆಕಲಿಯುವ ಸಾಧನಕ್ಕೆ
ಸಾಕಷ್ಟು ಅವಯವಗಳು..

ಪಾಟಿಯ ಪುಟ್ಟ ಕಪ್ಪು ಹಲಗೆಯ
ಮೇಲಿನ ಅನಿರ್ದಿಷ್ಟ ಬರಹಗಳನ್ನು
ಅಳಿಸುವ ಪುಟ್ಟ ಕೈಯ ಗುರುತು,
ಮುಂದೆಂದೋ ಆಗಬಹುದಾದ ಕಾವ್ಯದ ಹುಟ್ಟು?
ಮುದ್ದಾಗಿ, ಅಚ್ಚಾಗಿ ಬರೆಯಲೆಂದು
ನಾಲಗೆಯಲ್ಲಿ ಚೀಪಿ ಬಳಪವನ್ನು ತಿದ್ದುತ್ತ ಬರೆಯುವುದು,
ಮುಂದೆಂದೋ ಹುಟ್ಟಬಹುದಾದ ಚಿತ್ರದ ಹೆಜ್ಜೆ?
ಗೊಣ್ಣೆಸೊಪ್ಪಿನಿಂದ ತಿಕ್ಕಿ ತಿಕ್ಕಿ
ಪಾಟಿಯನ್ನು ಧಾಳಾಗಿ ಕಪ್ಪಾಗಿಸಿ
ತನ್ನ ಪಾಟಿಯ ಕಡುಗಪ್ಪನ್ನು ಸಹಪಾಠಿಗಳಲ್ಲಿ
ಸುಂದರವೆಂದು ಹೆಮ್ಮೆಯಿಂದ ಬೀಗುವುದು,
ಮುಂದೆಂದೋ ಮರೆಯಬಹುದಾದ ಸೌಂದರ್ಯಪ್ರಜ್ಞೆ? ; ಕಪ್ಪು ಕೊಳಕು!

ಹೊಸ ಸ್ವರೂಪದೊಂದಿಗೆ ಬದಲಾಗುತ್ತದೆ
ಚೀಲ. ಪಾಟಿಯಿಲ್ಲದ ಚೀಲ.
ಕಾಪಿ ಪುಸ್ತಕಗಳು, ಅಸಂಖ್ಯಾತ
ಪೆನ್ನು ಪೆನ್ಸಿಲ್ಲು ನೋಟುಬುಕ್ಕುಗಳು..

ಮಕ್ಕಳೀಗ ಅಳಿಸುವುದಿಲ್ಲ ಬರೆದದ್ದನ್ನು,
ಹರಿದು ಬಿಸಾಡುತ್ತವೆ...
ಅಪ್ಪ ಒಲೆಯ ಬೆಂಕಿಗೆ ಹಚ್ಚುತ್ತಾನೆ .

ಹೊಸವೆಷ ಹೊಸರಂಗಿನ
ಹೊಸ ನಮೂನೆಯ ಚೀಲಗಳು.
ಶಾಲೆ-ಕಾಲೇಜುಗಳ ತರುಣ ತರುಣಿಯರ ಬೆನ್ನ
ಕೆಳಗೆ ತುಂಬುವಂತೆ.
ಚೀಲಗಳ ಅವಯವಗಳೂ ತುಂಬಿರುತ್ತವೆ,
ಹೆಚ್ಚಾಗಿವೆ.

ಶಾಲೆಗಷ್ಟೇ ಸಾಧನವಾದ
ಚೀಲಗಳು..
ಮನೆಗೆ ಬಂದು ಸೋತ ಹೆಗಲಿನಿಂದ
ಜಾರಿ ಬೀಳುತ್ತವೆ.

Tuesday, July 28, 2009

ಶಹರಾಸ್ಥೆ

ಅಪರಿಚಿತ ಶಹರುಗಳು ರಸ್ತೆಗಳು ಚಹರೆಗಳು


ತರಗೆಲೆಯ ಮುಖಭಾವ ಪ್ರಶ್ನಾರ್ಥ ಹುಬ್ಬುಗಳು


ಗಡಿಬಿಡಿಯ ಘನಜನರು ಜನಗಣದಿ ಏಕಾಂತ


ಕಪ್ಪುರಸ್ತೆಗೆ ಕಪ್ಪು ಬೂಟು ಭಾರ.



ಅಲ್ಲೆ ತಾಳದ ಬಾಲೆ ಪರಿಚಿತಾಪರಿಚಿತದ


ಸನ್ಘರ್ಶವೆಣಿಸುತ್ತ ತಾಳ ಹಿಡಿದು.


ಕುಣಿಯುವಳು ತಳಕಾಗಿ ಕೂಳು ಬೇಳೆಯ ಭಾರ


ತಾಳಮೇಳಕೆ ಕ್ರಾಂತಿ ನಾಳೆ ಹೇಗೋ!



ಹಳೆ ಸೀರೆಯಂಗಡಿಯ ತುಂಬ ಆ ಹುಡಿಗೆಯರು


ಕಡಿಮೆ ಬೆಲೆ - ಮೈತುಂಬು ಬಟ್ಟೆಗಾಗಿ.


ಇತ್ತ ಮಾಲುಗಳಲ್ಲಿ ತುಟ್ಟಿ ಬಟ್ಟೆಯ ತೊಟ್ಟು


ಅನ್ದರಿವೆ ತೋರುವುದು ಚಿತ್ರ ಶಹರು.



ಶಹರ ಭೀದಳು ಯಾಕೊ ಒಂಟಿತನ ಕಾಡುವುದು


ದೊಮ್ಬರಾಟವು ಚೆಂದ ನೋಡಲಷ್ಟೇ..


ವಸ್ತು - ವ್ಯಂಗ್ಯದ ನಾಟ್ಯ ನಗಬೇಕೊ ಅಳಬೇಕೋ


ಆದರೂ ಶಹರಾಸ್ಥೆ , ಶಹರಸ್ಥಿಗಳೇ ನಾವು?

Wednesday, July 22, 2009

ಮೈಕದೇ

ಈ ಲೋಕದೆಲ್ಲರೂ ನನ್ನತ್ತ ಬೆರಳಿಟ್ಟು
ಆಡಿಕೊಳ್ಳುವರಲ್ಲ ಮಾನಬಿಟ್ಟು!
ಆದರೂ ನೀ ಹೇಳೆ ಪರುಷವನು ಕೇಳುತ್ತ
ಭಾದಿರ್ಯ ವೇಷವದು ಎಂಥ ನೋವು!

ಕಣ್ತಪ್ಪಿಸಿ ಜಗವನ್ನು ಕಾಡುದಾರಿಗಳಲ್ಲಿ
ನಮ್ಮ ಹೆಜ್ಜೆಗಳಿತ್ತ ಅಚ್ಚು ನೆನಪಿದೆಯ?
ಇಂದು ನಾ ಒಬ್ಬಂಟಿ ಮತ್ತದೇ ದಾರಿಗಳು
ಬಲುಭಾರ ಹೆಜ್ಜೆಗಳು ಎಂಥ ನೋವು!

ಎಲ್ಲ ಮರೆಯುವ ಯತ್ನ ಹೆಂಡದಂಗಡಿ ಸಖ್ಯ
ಗಜಲು ಬದುಕಿನ ಮಜಲ ಮದದಲ್ಲಿ ತೇಲುತ್ತ
ನೀ ದೂರ ಇತ್ತಾತ್ಮತೊಷವೂ ದೂರಾಗಿ
ಬಾಟಲಿಯ ದೂರುವುದು ಎಂಥ ನೋವು!