ನಿಮ್ಮ ಕಣಾದನ ಮೊದಲ ಕಥಾಸಂಕಲನ "ಮೊದಲ ಮಳೆಯ ಮಣ್ಣು" ಇದೇ ಬುಧವಾರ ಜನವರಿ ೨೬ರಂದು ಬಿಡುಗಡೆಯಾಗಲಿದೆ. ೨೦೧೧ರ ಛಂದ ಪುರಸ್ಕಾರವನ್ನು ಪಡೆದ ಕಥಾಸಂಕಲನದ ಬಿಡುಗಡೆಯ ಸಮಾರಂಭವು ಬೆಳಿಗ್ಗೆ ೧೦:೩೦ರಿಂದ ಚಾಮರಾಜಪೇಟೆಯ ಕ.ಸಾ.ಪ ಸಭಾಂಗಣದಲ್ಲಿ ಜರುಗಲಿದೆ.
ನಿಮ್ಮ ಉಪಸ್ಥಿತಿಯನ್ನು ಅಪೇಕ್ಷಿಸುವ,
ಡಾ. ಕಣಾದರಾಘವ


ಅದು ವಸಂತ.
ಅವಳು ಮತ್ತು ನಾನು,
ಎಂದಿನಂತೆ ನಮ್ಮ ಅಮರ ಪ್ರೇಮಕ್ಕೆ
ಸಾಕ್ಷಿಯಾಗಿದ್ದ
ದೊಡ್ಡ ಮಾವಿನಮರ.
ಪ್ರಕೃತಿ ಚೆಂದವಿತ್ತು.
ಅವಳು ಕವಿಯಾಗು ಎಂದಳು.
ಮುಖವಾಡವನ್ನು ಚಾಚಿ ಧರಿಸಿದೆ..
"ಕೋಗಿಲೆಯು ಕೂಗುವುದು ಪ್ರಕೃತಿ ಗೀತ.
ಭೂಕಂಪ ಸಂತ್ರಾಸ ಭೂಮಿಗೇ ತಾನೆ!
ನಿನ್ನ ಅಂಗಿಗೆ ಎಷ್ಟು ಗುಂಡಿಗಳು ಉಂಟೋ
ಹೊಸ ಹಾಳೆ ಮೂಸಲದೆಂಥ ರಮ್ಯ!"
ಅವಳ ಮುಂಗುರುಳು ಹಣೆಯ ತುಂಬ
ಹರಡಿ ಮತ್ತೆ ಯಥಾಸ್ಥಿತಿಯಲ್ಲಿ ನಿಂತಿತು.
ಅರ್ಥವಾಗಲಿಲ್ಲವೆಮ್ಬುದು ನನಗೂ ಅರ್ಥವಾಯಿತು..
ಮನಸ್ಸರಳಿತು..
ಮುಖವಾಡ ಕಳಚಿಟ್ಟೆ
"ನಿನ್ನ ನಾಚಿಕೆ ಛಂದ - ಚಂದ ಪರದೆಯ ಹಿಂದೆ
ಚಂದ - ಛಂದದಿ ಪದ್ಯ ಬರೆದಿಟ್ಟ ಹಾಗೆ..
ಮಧ್ಯರಾತ್ರಿಯ ಚಂದ್ರ ಘುಲಾಮಲಿ ಗಜಲುಗಳು
ಹಳೆ ಮದ್ಯದಾ ಶೀಶೆ ಜತೆಗಿದ್ದ ಹಾಗೆ.."
ಅವಳು ನಕ್ಕಳು,
ಮಳೆಗಾಲದ ಪ್ರಕೃತಿಯಂತೆ..
"ಕೋಗಿಲೆಯ ಕುಲದಲ್ಲಿ ಕೊಲಾಹಲವೆದ್ದಿತ್ತು
ನಿದ್ದೆಯಿಂದಾಗಷ್ಟೆ ಎದ್ದವೋ ಎಂಬಂತೆ
ಕೂಕುಹೂಗಳ ರಿಂಗನದಿ ಮರಗಳೆಲೆ
ಗಳೆಲ್ಲವೂ ಕೋಗಿಲೆಯ ಹಸಿರು ರೂಪ."
ವಸಂತ ಕಳೆದ.